News & Events

*ರಾಷ್ಟ್ರೀಯ ವಿಜ್ಞಾನ ದಿನ*

ನಮ್ಮ ಹೆಮ್ಮೆಯ ಭಾರತೀಯ ಭೌತಶಾಸ್ತ್ರಜ್ಞ ಸರ್.ಸಿ.ವಿ.ರಾಮನ್ ರವರು "ರಾಮನ್ ಎಫೆಕ್ಟ್" ಎಂಬ ಆವಿಷ್ಕಾರವನ್ನು ಮಾಡಿದ ನೆನಪಿಗಾಗಿ ಫೆ.28 ರಂದು ದೇಶಾದ್ಯಂತ "ರಾಷ್ಟ್ರೀಯ ವಿಜ್ಞಾನ ದಿನ"ವನ್ನಾಗಿ ಆಚರಿಸಲಾಗುತ್ತಿರುವ ಇಂದು ನಮಗೆಲ್ಲಾ ಹೆಮ್ಮೆಯ ದಿನ ಎಂದು ಕಲ್ಪನಾ ಚಾವ್ಲಾ ಪ್ರಶಸ್ತಿ ವಿಜೇತೆ, ದಾವಣಗೆರೆ ವಿಶ್ವವಿದ್ಯಾನಿಲಯದ ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥೆ ಡಾ.ಗಾಯತ್ರಿ ದೇವರಾಜ ಸಂತಸ ವ್ಯಕ್ತಪಡಿಸಿದರು.
ದಿನಾಂಕ 28-02-2021 ರಂದು ಹರಿಹರದ ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮ ದಲ್ಲಿ
ಮುಖ್ಯ ಅತಿಥಿಯಾಗಿ, ಸನ್ಮಾನ ಸ್ವೀಕರಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ವಿಜ್ಞಾನವು ಖಚಿತವಾಗಿದ್ದು,ಕರಾರುವಾಕ್ಕಾಗಿ ಸಾರ್ವತ್ರಿಕತೆಯನ್ನು ಪ್ರತಿಪಾದಿಸುತ್ತದೆ,ಇಂದು ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ವಿಜ್ಞಾನವಲ್ಲದ ಜೀವನವನ್ನು ಕಲ್ಪಿಸಲೂ ಅಸಾಧ್ಯ ಎಂದರು.
ದೇಶದ ಪ್ರತೀ ಕ್ಷೇತ್ರದಲ್ಲಿ ವಿಜ್ಞಾನದ ಕೊಡುಗೆ ಅಪಾರ ಎಂದರು. ಅದರಲ್ಲೂ ಇಂದು ನಾವು ಎದುರಿಸುತ್ತಿರುವ ಕೊರೋನಾ ರೋಗವನ್ನು ಹಿಮ್ಮೆಟ್ಟಿಸುವಲ್ಲಿ ವೈದ್ಯಕೀಯ ವಿಜ್ಞಾನದ ಪಾತ್ರವನ್ನು ಶ್ಲಾಘಿಸಿದರು.ಅಲ್ಲದೆ ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನದ ಕೊಡುಗೆ ವರ್ಣನಾತೀತ ಎಂದರು. ಮಾನವನ ಮೆದುಳು ಅಧಿಕ ಸಾಮರ್ಥ್ಯವನ್ನು ಹೊಂದಿದ್ದು,ವಿದ್ಯಾರ್ಥಿಗಳು ಅದರ ಬಳಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಕರೆನೀಡಿದರು. ಯೋಗ ಮತ್ತು ವ್ಯಾಯಾಮದ ಮೂಲಕ ದೇಹವನ್ನು ಸಧೃಢವಾಗಿಟ್ಟುಕೊಳ್ಳಬೇಕೆಂದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಬ್ಯಾಪ್ಟಿಸ್ಟ್ ಸನ್ನಿ ಗುಡಿನ್ಹೊ,ವಸತಿ ನಿಲಯದ ನಿರ್ದೇಶಕರಾದ ಫಾ.ರಾಯಪ್ಪ SJ,ಉಪ ಪ್ರಾಂಶುಪಾಲರಾದ ಪುಷ್ಪಲತಾ ಅರಸ್ ಹಾಗೂ ಪ್ರಿನ್ಸಿ ಫ್ಲಾವಿಯಾ ಪಿಂಟೊ,ಸಂಯೋಜಕರಾದ ನೀಲು ಉಪಸ್ಥಿತರಿದ್ದರು. ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಹಾಜರಿದ್ದರು.ಎಲ್ವಿನಾ ಸ್ವಾಗತಿಸಿದರೆ, ಸ್ವರೂಪ್ ವಂದಿಸಿದರು ಹಾಗೂ ಮೊಹಮ್ಮದ್ ಫೈಸಲ್ ನಿರೂಪಿಸಿದರು.